Sunday, February 16, 2014

Posted by ಬಡಗಿ | 0 comments

ಹೈದರಾಬಾದಿನ ಹೈರಾಣಗಳು - ೪ ತೆಲಂಗಾಣ ಘೋಷಣೆಗೆ ಸಿಹಿ ಹಂಚಿದ ಪ್ರಸಂಗ

ದಸರೆಯ ರಜೆಗೆಂದು ಬೆಂಗಳೂರಿಗೆ ಹೊರಡಲು ಎರಡು ತಿಂಗಳ ಮುಂಚಿತವಾಗಿ ರೈಲು ಸೀಟನ್ನು ಬುಕ್ ಮಾಡಿದ್ದೆ.  ಬಹಳ ದಿನಗಳ ನಂತರ ಬೆಂಗಳೂರಿಗೆ ಹೋಗುತ್ತಿದ್ದುದರಿಂದ ಹೈದರಾಬಾದಿನಿಂದ ಏನಾದರೂ ಸಿಹಿ ತೆಗೆದುಕೊಂಡು ಹೋಗೋಣ ಎಂದು ಕೊಂಡೆ.  ಇದಾಗಲೇ ಕರಾಚಿ ಬೇಕರಿ ಪದಾರ್ಥಗಳನ್ನು ತೆಗೆದುಕೊಂಡು ಹೋಗಿದ್ದರಿಂದ, ಬೇರೆ ಏನಾದರು ತೆಗೆದುಕೊಂಡು ಹೋಗೋಣ ಎನ್ನಿಸಿತು.  ಬೆಂಗಳೂರಿನಲ್ಲಿ ಎಂಟು-ಹತ್ತು ಮನೆಗಳನ್ನು ತಿರುಗಾಡಬೇಕಾದ್ದರಿಂದ ಪ್ರಯಾಣಕ್ಕೆ ಎರಡು ದಿನ ಮುಂಚಿತವಾಗಿ ನಾಲ್ಕು ಕೇಜಿ ಸೋನ್ ಪಾಪಡಿ ತೆಗೆದು ಕೊಂಡೆ. ಮನೆಗೆ ಬಂದಾಗ ನನ್ನ ಒಡತಿಯಿಂದ ಬೈಗುಳದ ಸುರಿಮಳೆ ಕಾದಿತ್ತು.  ಬೆಂಗಳೂರಿನಲ್ಲಿ ಸಿಗದ ಸಿಹಿಯೇ? ಎಂದು.  ಬೆಂಗಳೂರಿನಲ್ಲಿ ಸಿಗುತ್ತದೆ, ಆದರೆ ಹೈದರಾಬಾದಿನಿಂದ ತೆಗೆದುಕೊಂಡು ಹೋದಂತಾಗುತ್ತದೆಯೇ?

ಹೊರಡುವ ದಿನ ಬೆಳಿಗ್ಗೆಯೇ "ತೆಲಂಗಾಣ" ರಾಜ್ಯದ ಘೋಷಣೆಯ ಸುದ್ದಿ ಹೊರಬಂದಿತ್ತು.  ರಾಯಲಸೀಮೆ ಬೆಂಕಿಯುಂಡೆಯಾಗಿ, ಪ್ರತಿಭಟನೆಯಿಂದ ತುಂಬಿತ್ತು.  ರೈಲು ತಡೆ.  ಅನಿವಾರ್ಯವಾಗಿ ಬೆಂಗಳೂರಿಗೆ ಹೋಗೋದು ನಿಲ್ಲಿಸಬೇಕಾಯಿತು.  ಆದರೆ ನಾಲ್ಕು ಕೇಜಿ ಸೋನ್ ಪಾಪಡಿ ಏನು ಮಾಡುವುದೆಂದು ಯೋಚನೆಯಾಯಿತು. ಕೆಲಸದಲ್ಲಿ ಹಂಚಲೂ ಕಾರಣ ಕಾಣಿಲಿಲ್ಲ.  ನನ್ನ ಒಡತಿಯ ಸಲಹೆಯಂತೆ ಮನೆಯ ಹತ್ತಿರದ ಸಾಯಿ ಬಾಬಾ ಮಂದಿರಕ್ಕೆ ಸಿಹಿ ಹಂಚಲು ನೀಡಿದೆ. ಜೈ ತೆಲಂಗಾಣ! ಜೈ ಜೈ ತೆಲಂಗಾಣ!! ಘೋಷವಾಕ್ಯಗಳ ಭಿತ್ತಿಪತ್ರಗಳು ನನ್ನನ್ನು ನೋಡಿ ಹೂನಗೆ ಬೀರಿದಂತಾಯಿತು.

0 comments: